ಶುಕ್ರವಾರ, ನವೆಂಬರ್ 4, 2016

ಸೂರ್ಯ, ಕನ್ನಡಿಯ ಒಡೆದಾಗ



ಅದ್ಭುತವಾಗಿತ್ತು ಕಳೆದ ವರ್ಷ
ವರುಣನ ಮುನ್ನುಡಿ
ಹಾಗಾಗಿ, ಕೆರೆ ಕೊಳ್ಳ ತುಂಬಿ
ರಚನೆಯಾಗಿತ್ತು ನೀರಿನ ಕನ್ನಡಿ.

ಮುಖ ವೀಕ್ಷಣೆಗೆ ಭೂದೇವಿಯ ಕೊಡುಗೆ
ರವಿ ಚಂದ್ರ ತಾರೆಗೆ
ಅಲ್ಲಲ್ಲಿ ಬುಟ್ಟ, ನೀರ ನೆರಿಗೆಯ ಅಂಚು
ವನದೇವಿಯ ಹಸಿರ ಸೀರೆಗೆ.

ನೀರ ಕನ್ನಡಿಯಲ್ಲಿ ಮುಖನೋಡುತ್ತಿದ್ದ ಚಂದ್ರ
ತಾನೇ ಚಂದವೆಂದು ಕುಪ್ಪಳಿಸಿದ.
ಸಿಟ್ಟಾದ ಸೂರ್ಯ, ಕಿಚ್ಚಿನಲಿ ಉರಿದು
ಬಿಸಿಲಾಸ್ತ್ರದಲಿ ಅಪ್ಪಳಿಸಿದ.
ಹೊಡೆತಕ್ಕೆ ಕನ್ನಡಿ ಒಡೆಯಿತು
ಕಷ್ಟಗಳ ಹಡೆಯಿತು.
ಹೇಗೆ ಬಿದ್ದಿದೆ ನೋಡಿ
ಕಳಾಹೀನ ಕನ್ನಡಿಯ ಚೂರು
ಬದುಕ ದೇಹದ ಮೇಲೆ ಮಾಡಿದೆ ಗೀರು.


------ಸುಧಾಕಿರಣ ಅಧಿಕಶ್ರೇಣಿ.

1 ಕಾಮೆಂಟ್‌: