ಸೋಮವಾರ, ಅಕ್ಟೋಬರ್ 1, 2012

ತಾತನ ಪಥ

ಖಾಲಿ ಖಾತೆ
ಕೈಯಲ್ಲಿ ಗೀತೆ
ತೇವದ ಕರುಳು
ಓದಲು ಹರಳು
ಸವೆಸಿರೆ ಮೆಟ್ಟು 
ಬಿಗಿ ಇಹ ಪಟ್ಟು
ಉಡಲೆರಡು ವಸ್ತ್ರ
ಸತ್ಯಾಗ್ರಹದ ಅಸ್ತ್ರ

ನೂಲಿಗೆ ಚರಕ
ನಾಲಿಗೆ ಎರಕ
ಭಜನೆಯ ಸಾಲು
ಊರಲು ಕೋಲು
ಊಟದಿ ಪಥ್ಯ
ನೋಟದಿ ಸತ್ಯ

ಜೀವನ ಸರಳ 
ವಿಶ್ವದಿ ವಿರಳ
ನುಣ್ಣನ ತಲೆಯು 
ತಣ್ಣನ ನೆಲೆಯು
ಸಮಾನ ಮನಸು
ಬಿಡುಗಡೆಯ ಕನಸು

ವಾಂಛೆಯ ನಿಗ್ರಹ
ಶಾಂತತೆ ವಿಗ್ರಹ
ದಂಡಿಗೆ ದಂಡು
ಉಪ್ಪನು ಉಂಡು
ಕಟ್ಟದೆಲೆ ವೇಷ
ಕಟ್ಟಿದರು ದೇಶ

ಅಹಿಂಸೆಯ ಡೊಳ್ಳು
ಆಂಗ್ಲಗೆ ಮುಳ್ಳು
ದಾಸ್ಯದ ಕೊನೆ
ಲಾಸ್ಯದ ಕೆನೆ
ಗೆದ್ದಿತು ಖಾದಿ
ಬಿದ್ದಿತು ಗಾದಿ

ಬಿಳಿಯರ ಮದ್ದು
ನಿಲಿಸಿತು ಸದ್ದು
ಗೋಡ್ಸೆಯ ಗುಂಡು
ನಾಡಿಯ ತುಂಡು
ಅಮರರು ಬಾಪು
ಒತ್ತಿರೆ ಛಾಪು

ಮಹಾತ್ಮ ಗಾಂಧಿ
ಶಾಂತಿಗೆ ನಾಂದಿ.