ಮಂಗಳವಾರ, ಫೆಬ್ರವರಿ 9, 2010

ಒಂದು ಬೆಳಗು

ಮುಗಿಲ ಹೆರಳಿಗೆ ಅರಳು
ಹಕ್ಕಿ ಹೂವಿನ ದಂಡೆ
ಗೌಜು ವಾಹನ ಶಬ್ದ
ಬಡಿದು ಎಬ್ಬಿಪ ಚಂಡೆ
ಕೆಲಸ ಬೆಟ್ಟವ ನೆನೆದು
ಕುದಿವ ದಿನದಾ ಮಂಡೆ

ಕಾಂಕ್ರೀಟು ಚಪ್ಪರದಿ
ಅಡಗಿ ಮಿರುಗುವ ತೊಂಡೆ
ಬಣ್ಣದೋಕುಳಿ ಚೆಲ್ಲಿ ಮತ್ತೆ
ಕರಗುವ ಹಂಡೆ
ನೀಲ ಬಯಲಲಿ ನಗುವ
ಜಗದ ದೇವನ ಕಂಡೆ

ಯಾವುದೂ ಗೋಜಿರದೆ
ಮಲಗಿಹವು ಕೆಲ ಬಂಡೆ
ಬೆಳಗು ಸೂರ್ಯನ ನೋಡು
ಒಮ್ಮೆಯಾದರು ಸಂಡೆ.

ಬುಧವಾರ, ಜನವರಿ 27, 2010

ಮುಹೂರ್ತದ ರಗಳೆ

ಆತ ನನ್ನನ್ನು ಮೆಚ್ಚಿದ್ದಾನೆ
ನಾನು ಆತನನ್ನು ಮೆಚ್ಚಿದ್ದೇನೆ
ಮೆಚ್ಚಿದ್ದನ್ನು ಬಿಚ್ಚಿಡಲು
ಭಯ ಮುಜುಗರದಿಂದ ಬಚ್ಚಿಟ್ಟಿದ್ದೇವೆ.

ದಿನವೂನನ್ನ ಕೊರಗು-ಸೊರಗು ಕಂಡು
ಬೆಂಕಿ, ಹೊಳೆ,ವಿಷ, ಹಗ್ಗಕ್ಕೆ ಹೆದರಿ
ಅಪ್ಪ ಒಪ್ಪುತ್ತಾನೆ.
ಅಪ್ಪ ಒಪ್ಪಿದ ತಪ್ಪಿಗೆ , ತೃಪ್ತಿಗೆ
ಶಾಸ್ತ್ರ ಮುಹೂರ್ತಕ್ಕೆ ಕಟ್ಟುಬೀಳಬೇಕು.
ಬೀಳುತ್ತೇನೆ.
ಮುಹೂರ್ತ ಗೊತ್ತುಪಡಿಸಿದ್ದಾರೆ
ಆದರೆ ಆ ಹೊತ್ತಿಗೆ
ಅತ್ತಿಗೆಗೆ ಒಂಬತ್ತು ತುಂಬುತ್ತದೆ!

ಸ್ವಲ್ಪ ದಿನಗಳ ನಂತರ ನೋಡಿದರೆ
ನನಗೆ ತಿಂಗಳ ಕಡ್ಡಾಯ ರಜೆ!
ಹೋಗಲಿ ಇವೆರಡನ್ನೂ ತಪ್ಪಿಸಿ ಇಟ್ಟಿದ್ದಾಗಿದೆ,
ಇನ್ನು ತೊಂದರೆಯಿಲ್ಲ.

ಸ್ವಲ್ಪ ತಡೀರಿ......
ಒಂದು ಸುದ್ದಿ-
ಮುಲೆ ಮನೆ ಮಹದೇವನನ್ನು
ಹಾಸಿಗೆ ಸಹಿತ ಹೊರಗೆ ತಂದಿದ್ದಾರಂತೆ.
ಛೇ- ನಾನು ಮಾಲೆ ಹಾಕೋದು
ಮುಲೇಮನೆ ಮಹದೇವನಿಗಲ್ಲ
ಆದರೆ ಶಾಸ್ತ್ರ ಕೇಳಬೇಕಲ್ಲ, ಇರಲಿ.

ರಜೆ, ಸೂತಕ, ವೃದ್ಧಿ-ಎಲ್ಲಾ ಕಳೀತು
ಇನ್ನು ನಿಶ್ಚಿಂತೆ ... ಮುಹೂರ್ತ
...........ಹುಡುಕಬಹುದು,

ಅಯ್ಯೋ , ಎಂಥಾ ಅವಸ್ಥೇ
ಅವರಿಂದ ಪತ್ರ ಬಂದಿದೆ
ಇಟ್ಟಿರೋ ದಿನದ ಎಡಬಲಕ್ಕೆ
ತಾಯಿ ಒಳಗೆ ಬರೋದಿಲ್ವಂತೆ

ಒಳ್ಳೇ ಗ್ರಹಚಾರ,
ಹಲ್ಲು ಇದ್ದರೆ ಕಡಲೆಯಿಲ್ಲ
ಕಡಲೆಯಿದ್ದರೆ ಹಲ್ಲಿಲ್ಲ
ದಿನ ಇಟ್ಟರೆ ಹುಟ್ಟು-ಸಾವು-ಮುಟ್ಟು
ಬಿಟ್ಟರೆ ದಿನ ಬೇಕಲ್ಲ

ಅಂತೂ ಒಂದು ಮುಹೂರ್ತ ಅಡ್ಡಿಯಿಲ್ಲವಂತೆ
ಬರುವ ಶುಕ್ರವಾರವಂತೆ
ಒಂದು ಕೆಲಸ , ಅವತ್ತು ಬೇಡ
ಆ ಶುಕ್ರವಾರದ ೧೧ ದಿನಕ್ಕೆ ಸರಿಯಾಗಿ ಇಟ್ಟರೆ
ನನ್ನ ಮಗೂಗೆ ನಾಮಕರಣವನ್ನೂ ಮಾಡಬಹುದು
ಏಕೆಂದರೆ , ನಾಳಿನ ಶುಕ್ರವಾರಕ್ಕೆ ನನಗೆ
ಒಂಭತ್ತು ಪೂರ್ಣ ತುಂಬುತ್ತೆ.

ಶನಿವಾರ, ಜನವರಿ 9, 2010

ಮಹದೇವ

ರುದ್ರಭೂಮಿಯಲ್ಲಿನ ಮಹದೇವನ ಭದ್ರ ಬದುಕು
(ವಿಶ್ವೇಶ್ವರಭಟ್ಟರ ಅನಾಥ ಹೆಣಗಳನ್ನು ಚಿತಾಗಾರಕ್ಕೆ ಸಾಗಿಸುವ ಮಹದೇವನ ಕುರಿತಾದ ಲೇಖನದಿಂದ ಪ್ರೇರಿತ)
ಈತನ ಕಥೆಯನು ಕೇಳಿದ ಜನರಿಗೆ
ತುಂಬಲು ನೆಮ್ಮದಿ ಬಸಿರು
ಮಣ್ಣಲು ಶವಗಳು ಕಣ್ಣನು ಬಿಡುವವು
ಕೇಳಲು ಮಾದನ ಹೆಸರು.

ಬಡತನ ಕಾಡಲು ಹುಟ್ಟಿದ ಊರನು
ತೊರೆಯುವ ಘಳಿಗೆಯು ಬರಲು
ಒಡೆತನ ನೋಡಲು ದಿನಗಳ ದೂಡಲು
ಕಷ್ಟವು ಬಳಿಗೇ ಇರಲು

ತಾಯಿಯ ಜೊತೆಯಲಿ ಕೂಳನು ಅರಸುತ
ನಗರವ ಸೇರಿದ ಮಾದ
ರೋಗದಿ ಬಳಲಿದ ತಾಯಿಯು ಹರಸುತ
ಸೇರಲು ದೇವನ ಪಾದ.

ಮುಂದಿನ ಮಾರ್ಗವು ತೋರದೆ ಬದುಕಲಿ
ಕಾಡಲು ಊಟದ ಚಿಂತೆ
ಅನಾಥ ಹೆಣಗಳ ಹೂಳುವ ಕಾರ್ಯವು
ತರುತಿರೆ ಕಾಸಿನ ಕಂತೆ

ಜೀವನಸಾಗಲು ಆಸರೆಯಾಯಿತು
ಸರಕಾರಿ ದವಾಖಾನೆ
ಪಾವನಗೊಳ್ಳುವ ಜೀವನ ನಡೆಸಲು
ಹೊಟ್ಟೆಯಪಾಡ ನಮೂನೆ



ಅನಾಥ ಶವಗಳನ್ನೆತ್ತಿ ಸಾಗಿಸಲು
ಬರುವುದು ಮಾದನ ಗಾಡಿ
ವೈದ್ಯರು ಪರಿಕಿಸಿ ಒತ್ತಿ ಹೇಳಲು
ನಿಲ್ಲಲು ಬಡಿತವು ನಾಡಿ

ಬದುಕಿನ ಕಾಯಕ ಚರಮ ಗಾಯಕ
ದೀನರಪಾಲಿಗೆ ದಿಕ್ಕು
ಮುದುಕನು ಮಾದನು ಶಕ್ತಿಗೆ ಯುವಕನು
ಮಾಡನು ಎಂದೂ ಸೊಕ್ಕು

ಶವವನು ಎಳೆಯುತ ಮಸಣದ ಹಾದಿಯ
ಹಿಡಿವುದು ಮಾದನ ಅಶ್ವ
ತನ್ನವರಿಲ್ಲದೆ ಬದುಕುವ ಮಾದಗೆ
ಮರಣ ಮಸಣವೆ ವಿಶ್ವ

ಕುದುರೆಯು ಕೊನೆಯುಸಿರೆಳೆಯಲು ಮಿತ್ರರು
ಕೊಡಿಸಿದ ವಾಹನ ನಡೆಸಿ
ದೇವಕಾರ್ಯವನು ಕಂಡ ಮಿತ್ರರು
ಉಚಿತ ಇಂಧನವ ಬಡಿಸಿ

ದಿಕ್ಕು ತೋರದ ಶವಗಳ ನೋಡಲು
ಮಿಡಿಯುವ ಕರುಳಿನ ಬಳ್ಳಿ
ತನ್ನೊಡಹುಟ್ಟಿದರೆನ್ನುವ ಭಾವದಿ
ಸಾಗಿಸಿ ತಾಕಿಸಿ ಕೊಳ್ಳಿ

ಸಾವಿನ ಅರ್ಥವ ತಿಳಿಯದೆ ಕೇಳಲು
ಬಂದಿರೆ ತಾಯಿಯ ಸಾವು
ಜೀವನ ಪೂರ್ಣ ಸಾವಿನ ಜೊತೆಯಲಿ
ಕಳೆಯುತ ಗೆದ್ದಿರೆ ನೋವು

ಮಾನವನಾಗಿ ದೇವಗೆ ಸಮನಿರೆ
ಮಸಣಕೆ ಹೆಣಗಳ ಹೊತ್ತು
ಅಸಹ್ಯವೆಣಿಸದೆ ಜಾತಿಯ ಗಣಿಸದೆ
ಗತಿ ಇರದವರಾ ಸ್ವತ್ತು

ವರ್ಷಗಳುರುಳಲು ಕಾರ್ಯದಿ ತೊಡಗಲು
ಮನಸಿರೆ ಗಟ್ಟಿಯು ಮೊರಡು
ಹೆಣಗಳು ಮಸಣಕೆ ಸಾಗಿಹ ಮೊತ್ತವು
ಸಾವಿರ, ನಲವತ್ತೆರಡು

ಮಂದಿರ ನಿರ್ಮಿಸಿ ಮೂರ್ತಿಯ ಸ್ಥಾಪಿಸಿ
ಮಾಡದ ಮಾದನೆ ಗಣ್ಯ
ವಾರಸುದಾರನು ಶವಸಂಸ್ಕಾರಕೆ
ಗಳಿಸಿರೆ ಕೋಟಿಯ ಪುಣ್ಯ

ಸೇವೆಯ ಗುರುತಿಸಿ ಸಂಘ ಸಂಸ್ಥೆಗಳು
ನೀಡಿರೆ ಬಹುಪುರಸ್ಕಾರ
ತೃಪ್ತಿಯ ಹೊಂದಲು ಆಪ್ತಬಂಧುವು
ಮಾಡಲು ಶವಸಂಸ್ಕಾರ

ಪದಗಳ ನಮನವ ಸಲಿಸುವೆ ಬಾಗುತ
ತ್ರಿವಿಕ್ರಮ ಶ್ರೀ ಮಹದೇವ
ಸಾವಿರ ಹೆಣಗಳ ಸಾಗಿಸುತಿರಲು
ಸಾರ್ಥಕವಾಯಿತು ಜೀವ.

-ಸುಧಾಕಿರಣ್ ಅಧಿಕಶ್ರೇಣಿ

ಬುಧವಾರ, ಡಿಸೆಂಬರ್ 2, 2009

ಸಚಿನ್ ತೆಂಡುಲ್ಕರ್

ಬಯಲಲಿ ಇರೆ ಇಪ್ಪತ್ತು ದಾಖಲೆಯಾಗಿರೆ ಎಪ್ಪತ್ತು

ಸವ್ಯಸಾಚಿ ಸಚಿನ್ ಗೆ ಶುಭಕಾಮನೆಗಳು

ವಿಶ್ವವು ಬೆಚ್ಚುವ ಎಸೆವನು ಮೆಚ್ಚುವ

ಕ್ರಿಕೆಟ್ಟಿನಾಟದ ಮಾರ

ರಭಸದಿ ಚೆಚ್ಚುವ ಹಳತನು ಮುಚ್ಚುವ

ಧರೆಯಲೆ ದಾಖಲೆ ಶೂರ.

ಆಡಲು ಬರುತಿರೆ ನೋಡಲು ಈಧರೆ

ಹರ್ಷೋದ್ಗಾರದ ಗಾಳಿ

ಬಯಲಲಿ ಕರಗಲು ಮನದಲಿ ಮರುಗಲು

ಬಾಡುತ ಮುಖ ಎದುರಾಳಿ.

ಸೂಕ್ಷ್ಮದಿ ವೀಕ್ಷಿಸಿ ಕ್ಷೇತ್ರವ ರಕ್ಷಿಸಿ

ಆಡುವ ವೈಖರಿ ಚೆಂದ

ಓಟದ ಸುರಿಮಳೆ ಬರಿಸಲು ಈ ಇಳೆ

ಸಂತಸ ನೆರೆಯಲಿ ಬಂಧ.

ಅಟ್ಟುವ ಚೆಂಡಿನ ವೇಗವು ಗುಂಡಿನ

ಕ್ಷಣದಲಿ ಮುಟ್ಟಲು ನಾಕು

ಕುಟ್ಟುವ ರೀತಿಗೆ,ತಪ್ಪದ ನೀತಿಗೆ

ಜಗದಿರೆ ಮೆಚ್ಚುಗೆ ಸಾಕು.

ವೇಗದ ಎಸೆತಕೆ, ಎತ್ತಲು ಗಗನಕೆ

ಕಾಣದ ಚೆಂಡಿನ ಪಥವು

ಆರು ನಾಕುಗಳು ಸೇರಲು ಮೊತ್ತವು

ಮೆರೆಯಲು ದಾಖಲೆ ರಥವು.

ಟೀಕೆಯ ಮಾಡದೆ ದುರುದುರು ನೋಡದೆ

ಗಳಿಸಿರೆ ಎಲ್ಲರ ನೇಹ

ಸೋಲಲು ಬಾಡದೆ, ತೀರ್ಪಿಗೆ ಕಾಡದೆ

ಗೂಡನು ಸೇರುವ ಗೇಹ.

ಸಾವಿರ ಸಾವಿರ ಓಟವ ಕೂಡಲು

ವಿಶ್ವದ ಎತ್ತರ ವ್ಯಕ್ತಿ

ಆಟದ ಸಮಯದಿ ಮುಳುಗುತ ವಿನಯದಿ

ತೋರಲು ಅನುಪಮ ಭಕ್ತಿ.

ವಿಶ್ವವು ಮಣಿಯುವ ಹೆಮ್ಮೆಗೆ ಕುಣಿಯುವ

ಭಾರತ ಮಾತೆಯ ಪುತ್ರ

ಆಡಲುದಣಿಯನು ಆಡುತ ತಣಿಯನು

ದಾಖಲೆಗಗನದ ಮಿತ್ರ.

ದೈತ್ಯರ ದೇಹವ ಕಾಣುತ ಕ್ಷೇತ್ರದಿ

ದುರ್ಬಲನಾಗುತ ನಡುಗ

ಅಬ್ಬರದಲಿ ಹುಬ್ಬೇರಿಪ ಕ್ಷಾತ್ರದಿ

ಜಯಿಸುವ ನೀಲಿಯ ಹುಡುಗ.

ಎಸೆವನ, ರಾತ್ರಿಯ ಕನಸಲಿ ಬರುತಿರೆ

ಕೆಡಿಸುತ ಸೊಗಸಿನ ನಿದ್ದೆ

ಮರುದಿನ ನನಸಲಿ ದಾಂಡನು ತರುತಿರೆ

ಬೆವರಿಗೆ ಮೈಮನ ಒದ್ದೆ.

ಆಡುತ ಆಡುತ ಆಟದಿ ತೋರಲು

ಗಗನದಿ ಆರರ ಚಿತ್ರ

ನೋಡುತ ಜನಗಳ ಭಾವವೆ ಕಾಡಲು

ಕಳಿಸಲು ಮೆಚ್ಚುಗೆ ಪತ್ರ.

ನಲವತ್ತೈದನೆ ನೂರಿನ ದಾಖಲೆ

ಬರೆ ಏಕದಿನದ ಪಂದ್ಯ

ಹಿರಿಮೆ ಗರಿಮೆಗಳು ತೂರಿಬರುತಿರಲು

ಸಂತಸವೇರಿರೆ ವಿಂಧ್ಯ.

ನೂರರ ಕಟ್ಟನು ಟೆಸ್ಟಲಿ ತಟ್ಟಲು

ನಲವತ್ತೆರಡನೆಯ ಶತಕ

ಸ್ಫೂರ್ತಿಯ ಚಿಲುಮೆಗೆ ನಾಡಿನ ಒಲುಮೆಗೆ

ತೂಗಿರಿ ಸಚಿನರ ಫಲಕ.

ಗುರುವಾರ, ನವೆಂಬರ್ 26, 2009

ಪೇಪರ್ ಬಾಯ್

ಶಾಲೆಗೆ ಹೋಗಬೇಕು ಹಗಲು
ನೀಡಬೇಕು ಮನೆಕೆಲಸಕ್ಕೆ ಹೆಗಲು
ದಿನದ ಹೋಂವರ್ಕ್ ಮಾಡಿ
ಮುಗಿಸಿ ಊಟ
ಕೇಳಿ ಜಗಳದ ಕಾಟ
ರಾತ್ರಿ ಮಲಗುವುದೇ ಲೇಟು
ಮಾಡಿ ಹೊದಿಕೆಯ ಬೈಟು.

ಆಯಾಸಕ್ಕೆ ಕಣ್ತುಂಬ ನಿದ್ದೆ
ಮೈಕೈ ಸೇರಿ ಮುದ್ದೆ
ಸವಿಯಲು ರುಚಿಯ ಕನಸು
ತೃಪ್ತ ಸುಪ್ತ ಮನಸು.

ನಿದ್ದೆಯ peak ನಸುಕಿನ ಜಾವ
all-out-ಮುಸುಕಿನ ಜೀವ
ಹೊಡೆಯಿತು ಮಿತ್ರನ ಸೈಕಲ್ ಗಂಟೆ
ಇನ್ನು ಮಲಗುವುದು ಉಂಟೆ

ಎದ್ದು ಕಣ್ಣುಜ್ಜಿ ಹೊರಡಬೇಕು
ತೌರ ತೊರೆದು ತೆರಳುವ ತರಳೆಯಂತೆ
ದೂರದಲ್ಲಿ ಓದುತ್ತಿರುವ ಮಗ ಅಪರೂಪಕ್ಕೆ
ಬಂದು ಪುನಃ ಹಿಂದಿರುಗುವಂತೆ
ಒಲ್ಲದ ಮನಸ್ಸು, ಆದರೂ ನಿಲ್ಲಿಸುವುದುಂಟೆ
ಕುಟುಂಬ ದೇವತೆಗೆ ಕೊಡುವ
ಬದುಕ ಯಜ್ಞದ ಹವಿಸ್ಸು

ಸ್ವಗತ-ಪೇಪರ್ ಆಫೀಸಿಗೆ ಬಾಂಬ್ ಬಿದ್ದಿದ್ದರೆ
ಧಾರಾಕಾರ ಮಳೆ ಸುರಿದು ಪೇಪರ್ ವ್ಯಾನ್ ಮುಳುಗಿದ್ದರೆ
ಕಂಪಿಸಿ ಭೂಮಿ ಕುಸಿದಿದ್ದರೆ ಕಾರ್ಯ ಸ್ಥಗಿತ,
ಮಲಗಬಹುದಿತ್ತು ಇನ್ನೂ
ಮೈಮುರಿದು ಬೆನ್ನು

ಇಲ್ಲ , ಬದುಕ ದಿಕ್ಕು ದಿಕ್ಕಿನ ತದುಕು
ಸರಾಯಿ ತುಂಬಿದ ಅಪ್ಪನ ಬಾಯಿ
ಶಾಲಾಶುಲ್ಕ , ತಂಗಿಯ ಓದು
ಅಮ್ಮನ ಔಷಧಿ , ಅಪ್ಪನ ವ್ಯಾಧಿ
ಹೀಗೆ ಬರುವುದು ನೆನಪು , ಕೆಲಸಕ್ಕೆ ದಾಪು।
ಇನ್ನು ಮಲಗುವುದೇ?
ತೊಲಗುವುದೇ........
ಕೊರೆವ ಚಳಿ , ಎಳೆವ ಬದುಕಿನ ಸುಳಿ
ಸಮಸ್ಯೆಗಳ ತೂರಿ , ಸೈಕಲ್ ಏರಿ ಹೊರಟು
ರಸ್ತೆಯ ಒರಟು,
ಕ್ಷಣದಲ್ಲಿ ಸೇರಬೇಕು
ಪೇಪರ ವಿತರಕ ಶಿವಣ್ಣ
ಹೀಗೆ ಕಷ್ಟಪಟ್ತು ಬೆಳೆದ ನಮ್ಮಣ್ಣ.
ಕ್ಯಾರಿಯರ್ ಸೇರಿದ ಪೇಪರ್ ಕಟ್ಟು
ತುಳಿಯಲು ಹರಿದ ಮೆಟ್ಟು
ದಿನದ ಸಂಚಿಕೆ , ಮನೆಮನೆಗೆ ಹಂಚಿಕೆ
ಹಂಚುವ ವೇಗ ಕೆಲವು ಗೇಟಿಗೆ ಬೀಗ
ಗೇಟ್ ಹಾರಲು ಬೈಗುಳಗಳು ತೂರಲು
ಎತ್ತರಕ್ಕೆ ಪೇಪರ್ ಎಸೆದರೆ
ಗೋಡೆಗೆ ತಾಗಿ ವಾಪಾಸು
ಕರ್ಣನಂತೆ ನಾನು- ಬಿಟ್ಟಬಾಣ ತೊಡುವಂತಿಲ್ಲ
ಮೂರುನಾಲ್ಕನೆಯ ಮಹಡಿ
ಏರಬೇಕು ಗೃಹ ಪಹಡಿ
ಇನ್ನೆನು ಹೊರಡಬೇಕು , ಹೊಸ್ತಿಲಿಗೆ ಪೇಪರ್ ಇಟ್ಟು
ಹಿಡಿಯುವುದು ಯಜಮಾನನ ಬೈಗುಳದ ಪೆಟ್ಟು
ಯಾಕೆ ಲೇಟು? ನಾಯಿ ಥೇಟು
ಎಲ್ಲರಿಗೂ ಬೇಕು ಗಂಟೆ ಆರಕ್ಕೆ
ಇಲ್ಲದಿದ್ದರೆ ಸುತ್ತಿಕೊಳ್ಳಬೇಕು ಬೈಗುಳಗಳ ದಾರಕ್ಕೆ
ನಾನಾ ಪತ್ರಿಕೆ ನೂರಾರು ಮನೆಗೆ
ತಲುಪಿಸಿ ತಿನ್ನಬೇಕು ಬೈಗುಳಗಳ ಕೊನೆಗೆ
ತಟ್ಟ ಬೇಕು ಮನೆಮನೆಯ ಕದ
ಕೇಳಬೇಕು ಲೇಟ್ ಎಂಬ ಪದ
ಸುರಿವ ಮಳೆ , ರಸ್ತೆಯಲ್ಲೇ ಹರಿವ ಹೊಳೆ
ಅಟ್ಟಿಸಿಕೊಂಡು ಬರುವ ಬೀದಿ ನಾಯಿ
ಮುಚ್ಚಿಕೊಂಡಿರಬೇಕು ನಮ್ಮ ಬಾಯಿ....

ಸೋಮವಾರ, ಅಕ್ಟೋಬರ್ 5, 2009

ಸತಿಯಾದ ಹೆಣ್ಣು

ಈ ಕವನ ೧೯೮೮ ರಲ್ಲಿ ಪ್ರಕಟವಾದ ನನ್ನ ಕವನಸಂಕಲನ "ಬೆಳ್ಳಿನೊರೆ" ಯದು. ಆಕಾಶವಾಣಿಯಲ್ಲಿ ಕೂಡ ಪ್ರಾಸಾರವಾಗಿದೆ.
ಸತಿಯಾದ ಹೆಣ್ಣು
ಪತಿಯೊಡನೆ ಹೊರಟಿಹಳು
ನೀರು ತುಂಬಿದ ಕಣ್ಣು
ಮೂಲೆಯನು ಹಿಡಿದಿಹಳು
ಕಡಿಯಲಾರದ ದಂಟು
ಹೆತ್ತಬಳ್ಳಿಯ ನಂಟು
ಹೇಳಲಾಗದ ಒಡಲು
ಹರಿದಿಹುದು ಅಳಲ ಬಿಳಲು
ಒಡಹುಟ್ಟಿದವರೊಡನೆ
ಹುಟ್ಟಿಬೆಳೆದೀ ತೌರ
ಒಡೆಯಲಾಗದೆ ಬಳಲಿ
ಕುಳಿತಿಹಳು ಕನಲಿ
ಪರ ಊರ ಹೊಸ ಜನರ
ಸೇರಿ ಬದುಕುವ ಚಿಂತೆ
ಮರೆಯಲಾಗದ ತವರ
ತೊರೆಯುವಳು ಏಕಾಂತೆ
ಪತಿ ತನಗೆ ತೌರೆಂದು
ಕಣ್ಣೊರೆಸಿ ಹೋರಡುವಳು
ಗತಿಯಿಂದ ಪತಿಯೂರ
ಹೆಣ್ಣಾಗಿ ಸೇರುವಳು.

ಶುಕ್ರವಾರ, ಸೆಪ್ಟೆಂಬರ್ 11, 2009

ಸೌರ ಅಭಯ


ಇದು ನನ್ನ ಸೋಲಾರ ಗೀತೆಗಳು ಕವನಸಂಕಲದಿಂದ ಆಯ್ದ ಕವನ. ಸೋಲಾರ‍್ ಎನರ್ಜಿಯ ಕುರಿತಾಗಿ ೩೭ ಕವನಗಳನ್ನು ಒಳಗೊಂಡಿರುವ ಈ ಸಂಕಲನಕ್ಕೆ ಶತಾವಧಾನಿ ಆರ‍್. ಗಣೇಶ್ ಅವರು ಮುನ್ನುಡಿ ಬರೆದು ಹರಸಿದ್ದಾರೆ.

ಜಗದ ದೊಡ್ಡ ಹೆದರಿಕೆ
ಬೇಗ ಮುಗಿವ ಇಂಧನ
ಬಗೆದು ಹಾಕಿ ಬೆದರಿಕೆ
ಸೌರ ಶಕ್ತಿ ಮುಂದಿನ

ಜಗವನಾಳಿ ಮೆರೆವ ಸೊಕ್ಕು
ಗಟ್ಟಿ ತೈಲದೊಡೆಯನು
ಸೌರಪಾಳಿ ಮಾಡಿ ನಕ್ಕು
ತಟ್ಟಿ ನಮ್ಮ ತೊಡೆಯನು


ಶಕ್ತಿ ಸ್ವಂತ, ದೇಶಕಿರದೆ
ಅರ್ಥ ಬರೀ ಅತಂತ್ರ
ಬದಲಿ ರೂಪ ಕಾಣಬೇಕು
ಆಗ ದೇಶ ಸ್ವತಂತ್ರ


ಬತ್ತುತಿರಲು ತೈಲ ಬಾವಿ
ದರವು ಮುಟ್ಟಿ ಮುಗಿಲು
ಒತ್ತ ಬೇಕು ಸೌರ ಕೋವಿ
ದಾಸ್ಯ ಸುಟ್ಟು ಭುಗಿಲು.


ಮನೆಮನೆಯಲಿ ನಡೆಯ ಬೇಕು
ಸೌರಶಕ್ತಿ ಭೋದನೆ
ಕೈಗೆಟಕುವ ದರದಿ ಬೇಕು
ಸೌರಕರಣ ಶೋಧನೆ

ಈಗ ನಾವು ಎಚ್ಚರಾಗಿ
ಸೌರ ಬೀಜ ಬಿತ್ತಲು
ಮುಂದೆ ಜಗವು ಬೀಳದಿರಲಿ
ಹಗಲು ಬಾವಿ ಕತ್ತಲು.