ಪ್ರಕೃತಿಗೀತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರಕೃತಿಗೀತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ನವೆಂಬರ್ 4, 2016

ಸೂರ್ಯ, ಕನ್ನಡಿಯ ಒಡೆದಾಗ



ಅದ್ಭುತವಾಗಿತ್ತು ಕಳೆದ ವರ್ಷ
ವರುಣನ ಮುನ್ನುಡಿ
ಹಾಗಾಗಿ, ಕೆರೆ ಕೊಳ್ಳ ತುಂಬಿ
ರಚನೆಯಾಗಿತ್ತು ನೀರಿನ ಕನ್ನಡಿ.

ಮುಖ ವೀಕ್ಷಣೆಗೆ ಭೂದೇವಿಯ ಕೊಡುಗೆ
ರವಿ ಚಂದ್ರ ತಾರೆಗೆ
ಅಲ್ಲಲ್ಲಿ ಬುಟ್ಟ, ನೀರ ನೆರಿಗೆಯ ಅಂಚು
ವನದೇವಿಯ ಹಸಿರ ಸೀರೆಗೆ.

ನೀರ ಕನ್ನಡಿಯಲ್ಲಿ ಮುಖನೋಡುತ್ತಿದ್ದ ಚಂದ್ರ
ತಾನೇ ಚಂದವೆಂದು ಕುಪ್ಪಳಿಸಿದ.
ಸಿಟ್ಟಾದ ಸೂರ್ಯ, ಕಿಚ್ಚಿನಲಿ ಉರಿದು
ಬಿಸಿಲಾಸ್ತ್ರದಲಿ ಅಪ್ಪಳಿಸಿದ.
ಹೊಡೆತಕ್ಕೆ ಕನ್ನಡಿ ಒಡೆಯಿತು
ಕಷ್ಟಗಳ ಹಡೆಯಿತು.
ಹೇಗೆ ಬಿದ್ದಿದೆ ನೋಡಿ
ಕಳಾಹೀನ ಕನ್ನಡಿಯ ಚೂರು
ಬದುಕ ದೇಹದ ಮೇಲೆ ಮಾಡಿದೆ ಗೀರು.


------ಸುಧಾಕಿರಣ ಅಧಿಕಶ್ರೇಣಿ.

ಸೋಮವಾರ, ಅಕ್ಟೋಬರ್ 13, 2014

ಬೆಳಕಿನ ಬೆಣ್ಣೆ



ಅಂಬರ ಚುಂಬಿಸಿ
ನೇಸರ ಬಂದ
ಬಣ್ಣದ ಮೊಸರನು ಕಡೆಯುತಲಿ

ಗಿಡಮರ ಕೊರಳಲಿ
ನಾದವ ತುಂಬಿ
ಬಣ್ಣನೆ ಗೀತೆಯ ಹಾಡುತಲಿ

ನಲಿಯುತ ಬಲಿಯುತ
ಬೆಳಕಿನ ಬೆಣ್ಣೆ
ಎದ್ದಿತು ನೀಲಿಯ ಗಡಿಗೆಯಲಿ

ಬೆಣ್ಣೆಯ ಸವಿಯನು 
ಸವಿಯುತ ಜೀವಿಯು
ತೊಡಗಲು ದಿನದಾ ನಡಿಗೆಯಲಿ

ಸಂಜೆಯ ಕತ್ತಲು
ಮುತ್ತಲು ಸುತ್ತಲು
ಕರಗಿತು ಬೆಣ್ಣೆಯು ಬೆಡಗಿನಲಿ

ಕತ್ತಲು ಸುರಿಯಿತು
ಕಪ್ಪನೆ ಹಾಲನು 
ರಾತ್ರಿಯ ಪಾತ್ರೆಯ ಹಡಗಿನಲಿ 

ಗುರುವಾರ, ಜೂನ್ 13, 2013

ನಾನು ಬೋನ್ ಸಾಯಿ ಕೇಳಿ ನನ್ನ ಬಾಯಿ


ಚಿತ್ರ ಕೃಪೆ - ಅಂತರ್ಜಾಲ

ಮೊಳೆದು ಬೆಳೆದು 
ಮುಗಿಲು ಮುಟ್ಟಿ ಗೆಲ್ಲುವಾಸೆ
ಬೆಳಕು ಬಿಸಿಲ 
ಹೀರಿ ಹೊರಗೆ ನಿಲ್ಲುವಾಸೆ
ತಣ್ಣ ಗಾಳಿ
ಬೀಸಿ ಬರಲು ಮೆಲ್ಲುವಾಸೆ
ಬಿಸಿಯ ಉರಿಯ
ತಡೆದು ನೆಳಲ ಚೆಲ್ಲುವಾಸೆ
                        
ಬರಡು ನೆಲಕೆ
ಹಸುರು ಬಣ್ಣ ತೊಡಿಸುವಾಸೆ
ಹಕ್ಕಿಗಳಿಗೆ 
ಹಣ್ಣಿನೂಟ ಬಡಿಸುವಾಸೆ
ಕೊಂಬೆ ಕೊಂಬೆ 
ಹಕ್ಕಿ ಗೂಡ ಹೊರುವ ಆಸೆ
ಹಕ್ಕಿ ಗುಂಪ 
ಕರೆದು ಹಾಡ ಕೇಳುವಾಸೆ
ಹೂವ ತಳೆದು 
ಚೆಲುವ ಮೈಯ್ಯ ತೋರುವಾಸೆ
ಬೇರನಿಳಿಸಿ 
ನೆಲದ ಜಲವ ಹೀರುವಾಸೆ
ಚೈತ್ರ ಬರಲು 
ಕವಿಯ ಕರೆದು ಬರೆಸುವಾಸೆ 
ಬಿಳಲ ಬಿಟ್ಟು
ಚಿಣ್ಣರಿಟ್ಟು ತೂಗುವಾಸೆ
ಬೇರುಬಿಟ್ಟು
ಭದ್ರವಾಗಿ ಬಾಗುವಾಸೆ
ನನ್ನ ಜನ್ಮ 
ಸಫಲತೆಯಲಿ ಮಾಗುವಾಸೆ
ಮಳೆಯು ಸುರಿಯೆ 
ಹಸಿರು ಕೊಡೆಯ ಹಿಡಿಯುವಾಸೆ
ಚಿಗುರು ತುಟಿಯ
ತೆರೆದು ಜಗಕೆ ನುಡಿಯುವಾಸೆ
ಬೀಜ ತೂರಿ
ನನ್ನ ವಂಶ ಬೆಳೆಸುವಾಸೆ
ಎಲೆಯ ಕೆಡವಿ 
ಪೋಷಕಾಂಶ ಉಳಿಸುವಾಸೆ



ಏಕೆ ಮನುಜ
ನನ್ನ ಮೇಲೆ ನಿನಗೆ ಆಸೆ?
ನನ್ನ ಕಟ್ಟಿ 
ಮಾರಿಕೊಳಲು ಬಹುದು ಕಾಸೆ
ತಾಯಿ ಬೇರ 
ಕಡಿದುಬಿಟ್ಟೆ , ಹೀಗೆ ಬೆಳೆಸಿ
ಚಿಗುರ ಚಿವುಟಿ
ಹೀಗೆ ನೆಟ್ಟೆ ಕನಸ ಅಳಿಸಿ
ಮನೆಯ ಒಳಗೆ 
ತಂದು ಇಡುವೆ ಬಹಳ ಅಂದ
ಆಸೆ ಸುಟ್ಟು
ನೂಕಿ ಬಿಟ್ಟೆ ನನಗೆ ಬಂಧ
ಬದುಕಲಾರೆ 
ಸಾಯಲಾರೆ ಬೇಗ ಕೊಲ್ಲು
ತದುಕಲಾರೆ 
ಬೈಯ್ಯಲಾರೆ ಬರದು ಸೊಲ್ಲು
ಓದಿ ಬೆಳೆದು 
ಮನೆಯಲಿರುವ ಹೆಣ್ಣಿನಂತೆ
ಆಸೆ ತೂರಿ
ಅಳುವ ಮಾರಿ, ಅಬಲೆಯಂತೆ

ಇಲ್ಲ ಬಾಯಿ 
ಕೂಗಿಕೊಳಲು ನನ್ನ ಗತಿಯು
ಬೋನ್ ಸಾಯಿ
ಎಂಬ ಹೆಸರ ನನ್ನ ತಿಥಿಯು.

ಶುಕ್ರವಾರ, ನವೆಂಬರ್ 4, 2011

ಹಕ್ಕಿ-ಹೂವು


ಹೂವಿಗೆ ಇಲ್ಲ ಬರ
ಹಸಿರು ಇಲ್ಲದಿದ್ದರೂ ಇದೆ ಉಸಿರು
ಒಣಗಿದ ಕೊಂಬೆ ಇಟ್ಟಂತೆ ಗೊಂಬೆ
ತುಂಬೆಲ್ಲ ಕಂಗೊಳಿಪ ಹಕ್ಕಿ ಹೂವು
ವಿಶ್ರಮಿಸಿ ಕೊಡುತ್ತವೆ ಕಾವು .
ಹೂವು ಅರಳುತ್ತವೆ ,
ರೆಕ್ಕೆ ಬಿಚ್ಚಿದಾಗ
ಮೊಗ್ಗಾಗುತ್ತವೆ , ಮುಚ್ಚಿದಾಗ
ರೆಂಬೆಗೊಂದರಂತೆ ಲೆಕ್ಕ , ಅರಳುವ ದಳಗಳೆ ಪುಕ್ಕ
ಹೂವಿಗೆ ಚಲನೆಯಿದೆ ಅತ್ತಿತ್ತ ಬಾಗುತ್ತವೆ
ಮತ್ತೆ ಕೂಗುತ್ತವೆ
ಪುನಃ ಸ್ವಸ್ಥಾನಕ್ಕೆ ಮರಳುತ್ತವೆ
ಹೂವು ಹಣ್ಣಾಗಿ ಬೀಜ ಕೊಡುವಂತೆ
ಹೂಹಕ್ಕಿ ಹಾಡಿ ಕೂಡಿ
ಬಿಳಿಹೂವ ಬೆಳೆಯುತ್ತವೆ
ಎಲ್ಲರ ಸೆಳೆಯುತ್ತವೆ.

ಸೋಮವಾರ, ಏಪ್ರಿಲ್ 4, 2011

ಚೈತ್ರಚುಂಬನ


ತಂಬೆಲರ ಕಾಡಿನಲಿ
ಪರಿಮಳದ ಜಾಡಿನಲಿ
ಕೋಗಿಲೆಯ ಹಾಡಿನಲಿ
ಚಿಗುರು ಚುಂಬನ ತುಟಿಯ ತುಂಟಿ ಚೈತ್ರ

ಬಣ್ಣ ಬಣ್ಣದ ಉಡುಪು
ತುಂಬು ಫಲಗಳ ಹಿಡಿಪು
ಭಾವಜೀವಿಗೆ ಮುಡಿಪು
ಮನವ ಸಾವಿರ ಸೆಳೆದ ಚೆಲುವ ಜೈತ್ರ

ಇಡಲು ಚೆನ್ನಡಿ ಕೆಳಗೆ
ಸುರಿವ ಸುಮಗಳ ಮಳೆಗೆ
ಕಣ್ಣು ತುಂಬಲು ಕಳೆಗೆ
ಭುವನಸುಂದರಿ ಬರುವು ಕೊಟ್ಟ ಸುಳಿವು

ಆಗಸದ ಕಡುನೀಲಿ
ಹೂಗೊಂಚಲಿನ ಡೋಲಿ
ಪ್ರಾಯಪ್ರೇಮದ ಕೇಲಿ
ಮುಳುಗಿ ಏಳಲು ನವುರ ಹರಯ ಕೊಳವು

ಮಾವು ಬೇವಿನ ಚಿಗುರು
ಅರೆಗಾಯಿಗಳ ಒಗರು
ಘಮಿಪ ಮರಗಳ ಅಗರು
ಸೂರ್ಯ ರಶ್ಮಿಯು ಇಳೆಗೆ ಸುರಿವ ಝಳವು