ಸೋಮವಾರ, ಅಕ್ಟೋಬರ್ 1, 2012
ತಾತನ ಪಥ
ಬುಧವಾರ, ಆಗಸ್ಟ್ 8, 2012
ದ್ವಾಪರದ ಶ್ರೀಕೃಷ್ಣ ದೇವನೆನಿಸಿಲ್ಲ
ದ್ವಾಪರದ ಶ್ರೀಕೃಷ್ಣ ದೇವನೆನಿಸಿಲ್ಲ
ವ್ಯಾಪಿಸಿರೆ ಕಣಕಣದಿ ಸರ್ವಮಾನ್ಯದ ಗುಣದಿ
ಮನುಜ ಶಕ್ತಿಯೆ ಎನಲು ಅವಗೆ ಮುನಿಸಿಲ್ಲ.
ವಿಷದ ಮೊಲೆಯನು ಉಂಡು ಸಾಯಲೆಳೆಸದ ಗಂಡು
ಪೂತನಿಯ ಕೊಂದಿರಲು ಗುದ್ದಿಗುದ್ದಿ
ವಿಕ್ರಮವು ಪೋರನ ನವನೀತ ಚೋರನ
ಪುರವೆಲ್ಲ ತುಂಬಿರಲು ಹೆಮ್ಮೆ ಸುದ್ದಿ.
ಅಂಬೆಗಾಲಲಿ ಹರಿದು ಬೆಣ್ಣೆ ಗಡಿಗೆಯ ಸುರಿದು
ಹಾಲು ಮೊಸರಲೆ ಬೆಳೆದ ಮುದ್ದು ತುಂಟ
ಕೊಂಬೆ ರೆಂಬೆಯ ತರಿದು , ಮಣ್ಣ ಬಾಯಿಯ ತೆರೆದು
ಅಮ್ಮನನು ಬೆಚ್ಚಿಸಲು ತುಂಬಿ ಕಂಠ.
ವಿಷಕಾರಿ ಹಾವಿನ ಉಪಟಳವ ತಪ್ಪಿಸಲು
ಹೆಡೆತುಳಿದು ಹೆದರಿಸುತ ಓಡಿಸಿರಲು
ಭಯದ ಸೆರಗಿನಲಿದ್ದ ಪುರಜನರ ಬಿಡಿಸಿದ್ದ
ಹಾವುನೋವಿನ ರಗಳೆ ಝಾಡಿಸಿರಲು.
ಗೋಪಿಕೆಯ ಜಡೆ ಎಳೆದು ಮೈಗೆ ಬೆಣ್ಣೆಯ ಬಳಿದು
ಗೋಳಿನಾಟವ ಆಡಿ ಮೆರೆದ ಪುಂಡ
ಜಳಕದಲಿ ಗೋಪಿಯರ ಕಂಡು ಪುಳಕಿತನಾಗಿ
ವಸ್ತ್ರಗಳ ಅಪಹರಿಸಿ ಕರೆದ ಭಂಡ.
ಏದು ರಕ್ಕಸ ತಂಡ ಕಾದು ದನಗಳ ಹಿಂಡ
ಹೈನುಗಾರಿಕೆಯರ್ಥ ತಿಳಿದ ಪೋರ
ಪ್ರೀತಿ ಮಳೆಯನು ಸುರಿಸಿ ಹಾಲು ಹೊಳೆಯನು ಹರಿಸಿ
ಗೋಕುಲವ ತಣಿಸಿರುವ ತಂತ್ರಗಾರ.
ವ್ಯವಹಾರ ಚತುರನಿವ ವ್ಯಾಪಾರ ಹೆಚ್ಚಿಸಿರೆ
ಗೋಕುಲದ ತುಂಬೆಲ್ಲ ಅರ್ಥ ಸಂಮೃದ್ಧಿ
ಪರ್ವತದ ಕೊಡೆ ಹಿಡಿದು ಇಂದ್ರನನು ನಾಚಿಸಿರೆ
ಪ್ರಕೃತಿಪೂಜೆಗೆ ನೀಡಿ ಚಲನೆ ಸುದ್ದಿ.
ಬೆಣ್ಣೆ ಕರಗಲು ಕೈಗೆ ಕೊಳಲು ಬಂದಿರೆ ಮೈಗೆ
ಹುಡುಗಾಟ ಹೊರಹೋಗಿ ಹರಯ ಬಂದು
ಅತೃಪ್ತ ರಾಧೆಯನು ನುಡಿಸಿ ಸವಿ ಸೋದೆಯನು
ಶೃಂಗಾರ ಯಮುನೆಯಲಿ ದಿನವು ಮಿಂದು.
ಕೊಳಲು ಕೈಯೊಳಗಿರಲು ಬಿಡದು ಪ್ರೇಮದ ನೆಳಲು
ಅರಿತು ಕೊಳಲನು ಇಡಲು ರಾಧೆಯಳಲು
ತ್ಯಾಗದಲಿ ಸಾಧನೆಯು ನೆನಪಿರಲು ವೇದನೆಯು
ಬಿಟ್ಟು ಹೊರಡಲು ಸ್ಮರಣೆ ಹೆಜ್ಜೆ ಮಳಲು.
ಮಾವ ಕಂಸನ ಕೊಲದೆ ಮಥುರ ನಗರಿಯ ಗೆಲದೆ
ಬದುಕು ದುಸ್ತರವಾಗಿ ಕಂಸವಧೆಯು
ಬಿಡಿಸಿ ಒದಗಿದ ವ್ಯಾಜ್ಯ , ಕೊಡಿಸಿ ಅಜ್ಜಗೆ ರಾಜ್ಯ
ಕಲಿಕೆ ಸಾಂದೀಪಿನಿಯ ಜ್ಞಾನಸುಧೆಯು.
ರಾಜ್ಯವನು ಗೆಲಿಸುವುದು ರಾಜನನು ನಲಿಸುವುದು
ರಾಜನಾಗುವ ಆಸೆ ತೋರಲಿಲ್ಲ
ತಂತ್ರಗಳ ಹೂಡುತಲಿ ರಾಜನನು ಮಾಡುತಲಿ
ಎಲ್ಲು ಒಂದೆಡೆ ಇನಿತು ಕೂರಲಿಲ್ಲ.
ಪ್ರೌಢಿಮೆಯ ಹಲಹಂತ ಸಾಗುತಿರೆ ಧೀಮಂತ
ಬೆಣ್ಣೆ ಕೊಳಲದು ಕಳಚಿ ಚಕ್ರ ಬಂತು
ದುಷ್ಟ ಶಿಕ್ಷಣಕೆಂದು ಶಿಷ್ಟ ರಕ್ಷಣವೆಂದು
ಉಗ್ರತಂತ್ರದ ಕಾರ್ಯ ಮಾಡಿ ನಿಂತು.
ದೇವಕಿಯ ಸಂಜಾತ ,ರುಕ್ಮಿಣಿಯ ಸಂಪ್ರೀತ
ಸತ್ಯಭಾಮೆಯ ನಿತ್ಯ ಮುದಗೊಳಿಸಿದವನು
ಮಹಿಳೆಯರ ಒಳಮನದ ಸೂಕ್ಷ್ಮತೆಗೆ ಸ್ಪಂದಿಸುತ
ಸಮತೆ ಭಾವವ ತೋರಿ ಹದಗೊಳಿಸಿದವನು.
ದ್ವಾರಕೆಯ ನಿರ್ಮಾಣ ವ್ಯವಹಾರ ಉಗ್ರಾಣ
ಅರ್ಥಕಲ್ಪನೆಗೊಂದು ನೀಡಿ ರೂಪ
ಕಡಲತೀರದ ನಗರಿ ವಹಿವಾಟುಗಳು ಚಿಗುರಿ
ಬಂದರಿನ ಬಾಂಧವ್ಯ ತಂದ ಭೂಪ.
ಬಡತನವ ಪ್ರತಿನಿಧಿಪ ಸುಧಾಮನಲಿ ಹುರುಪ
ತುಂಬಿ,ಮನೆಯಲಿ ಉಂಡು ಹಿಡಿಯ ಅವಲಕ್ಕಿ
ಸಂಕಷ್ಟದಲಿ ಅಂದು ದ್ರೌಪದಿಯು ಸಿಲುಕಿರಲು
ಅನ್ನ ಅಕ್ಷಯಗೊಳಿಸೆ ಹರುಷ ಉಕ್ಕಿ,
ಯುದ್ಧರಂಗದಿ ನಿಂದು ಬಂಧುವೆನ್ನದೆ ಕೊಂದು
ಗೆಲುವ ಗುರಿಯಾಗಿಸಲು ನೀಡಿ ಸ್ಫೂರ್ತಿ
ಯುದ್ಧದುದ್ದೇಶವೇ ಗೆಲವು ಮಾತ್ರವೆ ಎಂದ
ಗುರುವಾಗಿ ಕ್ಷಣಕ್ಷಣದಿ ನಿಂತ ಮೂರ್ತಿ.
ಸಮರ ಸನ್ನದ್ಧನಿಗೆ ಅಳುವೇಕೆ ಅಳುಕೇಕೆ
ಯುದ್ಧ ನೀತಿಯ ಬಿಡದೆ ತುಡುಗು ಎಂದ
ಭ್ರಮರ ಮತಿಯದು ಬೇಡ ನಿಶ್ಚಯಿಸಿ ಗುರಿಮಾಡ
ದುಷ್ಟ ಸಂಹಾರವೇ ಮುಖ್ಯವೆಂದ.
ಶನಿವಾರ, ಮೇ 12, 2012
ತಾಯಂದಿರ ದಿನಾಚರಣೆಯಂದು ಎರಡು ಚುಟುಕುಗಳು
ಶುಕ್ರವಾರ, ನವೆಂಬರ್ 4, 2011
ಹಕ್ಕಿ-ಹೂವು
ಹಸಿರು ಇಲ್ಲದಿದ್ದರೂ ಇದೆ ಉಸಿರು
ಒಣಗಿದ ಕೊಂಬೆ ಇಟ್ಟಂತೆ ಗೊಂಬೆ
ತುಂಬೆಲ್ಲ ಕಂಗೊಳಿಪ ಹಕ್ಕಿ ಹೂವು
ವಿಶ್ರಮಿಸಿ ಕೊಡುತ್ತವೆ ಕಾವು .
ಹೂವು ಅರಳುತ್ತವೆ ,
ರೆಕ್ಕೆ ಬಿಚ್ಚಿದಾಗ
ಮೊಗ್ಗಾಗುತ್ತವೆ , ಮುಚ್ಚಿದಾಗ
ರೆಂಬೆಗೊಂದರಂತೆ ಲೆಕ್ಕ , ಅರಳುವ ದಳಗಳೆ ಪುಕ್ಕ
ಹೂವಿಗೆ ಚಲನೆಯಿದೆ ಅತ್ತಿತ್ತ ಬಾಗುತ್ತವೆ
ಮತ್ತೆ ಕೂಗುತ್ತವೆ
ಪುನಃ ಸ್ವಸ್ಥಾನಕ್ಕೆ ಮರಳುತ್ತವೆ
ಹೂವು ಹಣ್ಣಾಗಿ ಬೀಜ ಕೊಡುವಂತೆ
ಹೂಹಕ್ಕಿ ಹಾಡಿ ಕೂಡಿ
ಬಿಳಿಹೂವ ಬೆಳೆಯುತ್ತವೆ
ಎಲ್ಲರ ಸೆಳೆಯುತ್ತವೆ.
ಶುಕ್ರವಾರ, ಏಪ್ರಿಲ್ 8, 2011
ಭಾವ - ಬಣ್ಣ
ಬದುಕು ಸಾರ್ಥಕಗೊಳಲು ಬಣ್ಣ ಬೇಕೆ ?
ಬಿಳಿಯ ಬಣ್ಣದ ತೊಗಲು ಒಲವು ಒಣಗಿರುವ ಕೆರೆ
ಭಾವ ಬಾಯಾರಿಕೆಗೆ ಬಣ್ಣ ಸಾಕೆ?
ಬಣ್ಣಗಳು ಬದುಕನ್ನು ಹಸನುಗೊಳಿಸುವುದಿಲ್ಲ
ಪ್ರೀತಿ ನೇಗಿಲು ಉಳಲು ಭಾವ ಬೆಳೆಯು
ಸಹಜತಯು ಮುತ್ತುತಿರೆ ಮಣ್ಣಗುಣ ಮೆತ್ತುತಿರೆ
ಮೂಲ ಸಾರವ ಹೀರಿ ಬರಲು ಕಳೆಯು.
ಬಣ್ಣಗಳು ಮೂಲದಿಂ ಬಂದಿರಲು ಬದಲಿಸಲು
ಸಾಧ್ಯವಾಗದು ಸದ್ಯ, ಭಾವ ಮುಖ್ಯ
ಜೀವನದ ಕುಣಿಕೆಯಲಿ ಭಾವವೆಮ್ಮೆಣಿಕೆಯಲಿ
ಒಲವಿನಲಿ ಬೆಸಗೊಳಲು ಬೇಕು ಸಖ್ಯ.
ಕರಿಯನೋ ಬಿಳಿಯಳೋ ಬಣ್ಣಗಳು ಬೇಕಿಲ್ಲ
ಬಾಳು ಸಿಂಗರಗೊಳಲು ದ್ವೇಷ ನೂಕಿ
ಬಿಳಿಯಳೋ ಕರಿಯನೋ ಭಾವಗಳು ಯಾಕಿಲ್ಲ
ಬಾಳಬೇಕಿರುವ ದಿನ ಮೂರು ಬಾಕಿ.
ಒಲವು ಒಡಲೊಳಗಿರಲು ಮೈಬಣ್ಣವೆಂತಿರಲಿ
ಬಣ್ಣದೋಕುಳಿಯಾಟ ಬದುಕರಂಗ
ನಲವಸವಿ ನವಿಲಗರಿ ಮನದಲ್ಲಿ ಬಿಚ್ಚದಿರೆ
ಬಣ್ಣಬಣ್ಣದ ಕನಸು ಪೂರ್ಣ ಭಂಗ.
ಸೋಮವಾರ, ಏಪ್ರಿಲ್ 4, 2011
ಚೈತ್ರಚುಂಬನ
ಪರಿಮಳದ ಜಾಡಿನಲಿ
ಕೋಗಿಲೆಯ ಹಾಡಿನಲಿ
ಚಿಗುರು ಚುಂಬನ ತುಟಿಯ ತುಂಟಿ ಚೈತ್ರ
ಬಣ್ಣ ಬಣ್ಣದ ಉಡುಪು
ತುಂಬು ಫಲಗಳ ಹಿಡಿಪು
ಭಾವಜೀವಿಗೆ ಮುಡಿಪು
ಮನವ ಸಾವಿರ ಸೆಳೆದ ಚೆಲುವ ಜೈತ್ರ
ಇಡಲು ಚೆನ್ನಡಿ ಕೆಳಗೆ
ಸುರಿವ ಸುಮಗಳ ಮಳೆಗೆ
ಕಣ್ಣು ತುಂಬಲು ಕಳೆಗೆ
ಭುವನಸುಂದರಿ ಬರುವು ಕೊಟ್ಟ ಸುಳಿವು
ಆಗಸದ ಕಡುನೀಲಿ
ಹೂಗೊಂಚಲಿನ ಡೋಲಿ
ಪ್ರಾಯಪ್ರೇಮದ ಕೇಲಿ
ಮುಳುಗಿ ಏಳಲು ನವುರ ಹರಯ ಕೊಳವು
ಮಾವು ಬೇವಿನ ಚಿಗುರು
ಅರೆಗಾಯಿಗಳ ಒಗರು
ಘಮಿಪ ಮರಗಳ ಅಗರು
ಸೂರ್ಯ ರಶ್ಮಿಯು ಇಳೆಗೆ ಸುರಿವ ಝಳವು
ಮಂಗಳವಾರ, ಸೆಪ್ಟೆಂಬರ್ 7, 2010
ಗ್ರಹಣ ವಿಜ್ಞಾನ
ಬಾನಿನಂಗಳದಲ್ಲಿ ಚಣಕಾಲ ನಡೆಯುವುದು
ನೆಳಲು ಬೆಳಕಿನ ಚೆಲುವ ಆಟ
ನಯನಗಳ ಎದುರಿನಲಿ ನಯವಾಗಿ ತೋರುವುದು
ಗಗನ ವೈವಿಧ್ಯದಾ ಸವಿಯ ಊಟ.
ಯಾವುದೋ ವೇಗದಲಿ ಯಾವುದೋ ಜಾಗದಲಿ
ಸಂಧಿಸಲು ಕಾಯಗಳ ದಿನದ ಪಯಣ
ಸೇರುವಾ ದಿನಬರಲು ಸಂತಸದ ಸವಿತರಲಿ
ಗ್ರಹಣ ಗಗನದೆಡೆಗೆ ಹರಿವ ನಯನ.
ಭೂಮಿ ಸೂರ್ಯನ ನಡುವೆ ಚಂದ್ರ ಕುಣಿಯುತ ಬರಲು
ಸೇರುತಲಿ ಕಾಯಗಳು ಸರಳರೇಖೆ
ಚಂದ್ರನಾ ಇಡಿನೆರಳು ಭೋಮಿಯಲಿ ಬಿದ್ದಿರಲು
ಗ್ರಹಣದಧ್ಯಯನಕ್ಕೆ ತೆರೆದಶಾಖೆ.
ಅಡ್ಡನಾಗಲು ಚಂದ್ರ ರವಿಯ ಮರೆಯಾಗಿಸುತ
ಅರ್ಧಭೂಮಿಯ ಮೇಲೆ ಹಗಲುಮಾಯ
ನೆಳಲು ಬೆಳಕಲಿ ನಡೆವ ಚಿತ್ರವೈಚಿತ್ರ್ಯಕೆ
ಚಲನೆ ಕಾರಣ ಮೂಲ ಗಗನಕಾಯ.
ಗ್ರಹಣವಾಗುವ ಮೊದಲು ಬೆಳಕ ದೋಣಿಯನೇರಿ
ಯಾರೊ ಬಂದರು ನೆರಳ ಪರದೆ ಹಿಡಿದು
ಗ್ರಹಣ ಕರಗಲು ಹಿಡಿಯೆ ವಜ್ರದುಂಗುರ ತೋರಿ
ಮುಂದೆ ನಡೆದರು ಬೆಳಕ ಪ್ರೀತಿ ಮಿಡಿದು.
ಬೆಳಕ ಕಾಯಗೆ ಬೇಕು ಗ್ರಹಣವಾಗಲು ತಡೆಯು
ಅದಕೆ ಉಪಗ್ರಹದ ಬಲ ಸನಿಹವಿರಲು
ತಡೆಯು ಇಲ್ಲದೆ ಗ್ರಹಣ ಬರಿದೆ ನಿತ್ಯದ ಭ್ರಮಣ
ಸೊಗಸ ಸಂಪೂರ್ಣತೆಯು ಕೊರಗುತಿರಲು.
ಜಗದ ಕಾಯಕ ನಿತ್ಯ ಗಗನ ಕಾಯದ ಸತ್ಯ
ತಿಳಿಸುವುದು ಈ ತೆರನ ವಿದ್ಯಮಾನ
ಸಿಗಲು ಮಾಹಿತಿ ಇಂಥ ಸರಿಯುವುದು ಕತೆ ದಂತ
ಅಳಿಸುವುದು ಮೌಢ್ಯವನು ನೀಡಿ ಧ್ಯಾನ.
ಮೌಡ್ಯ ನಂಬಲುಬೇಡಿ ಸೂಕ್ಷ್ಮತನದಲಿ ನೋಡಿ
ರವಿಯ ನುಂಗಲು ಬಹನು ಕೇತುವಲ್ಲ
ಮೂಲ ಬೆಳಕಿನ ನಡುವೆ ಮರೆ ಇರಿಸುವಾ ನೆರಳು
ಗ್ರಹಣವಾಗಲು ಕೇತು ಹೇತುವಲ್ಲ.
ಬರಿಯ ಕಣ್ಣಲಿ ರವಿಯ ನೋಡುವುದು ನಿಲ್ಲಿಸಿರಿ
ಪ್ರಖರ ಬೆಳಕಿನ ಕಿರಣ ಸುಡಲು ಸಾಕು
ಪರಿಸರದ ಮೇಲೆಲ್ಲ ಪರಿಣಾಮ ಬೀರಿದರೆ
ಎಂದಿನಂತೆಯೆ ಬಾಳು ನಡೆಸಬೇಕು.
