ಶನಿವಾರ, ಮೇ 12, 2012
ತಾಯಂದಿರ ದಿನಾಚರಣೆಯಂದು ಎರಡು ಚುಟುಕುಗಳು
ಶುಕ್ರವಾರ, ನವೆಂಬರ್ 4, 2011
ಹಕ್ಕಿ-ಹೂವು
ಹಸಿರು ಇಲ್ಲದಿದ್ದರೂ ಇದೆ ಉಸಿರು
ಒಣಗಿದ ಕೊಂಬೆ ಇಟ್ಟಂತೆ ಗೊಂಬೆ
ತುಂಬೆಲ್ಲ ಕಂಗೊಳಿಪ ಹಕ್ಕಿ ಹೂವು
ವಿಶ್ರಮಿಸಿ ಕೊಡುತ್ತವೆ ಕಾವು .
ಹೂವು ಅರಳುತ್ತವೆ ,
ರೆಕ್ಕೆ ಬಿಚ್ಚಿದಾಗ
ಮೊಗ್ಗಾಗುತ್ತವೆ , ಮುಚ್ಚಿದಾಗ
ರೆಂಬೆಗೊಂದರಂತೆ ಲೆಕ್ಕ , ಅರಳುವ ದಳಗಳೆ ಪುಕ್ಕ
ಹೂವಿಗೆ ಚಲನೆಯಿದೆ ಅತ್ತಿತ್ತ ಬಾಗುತ್ತವೆ
ಮತ್ತೆ ಕೂಗುತ್ತವೆ
ಪುನಃ ಸ್ವಸ್ಥಾನಕ್ಕೆ ಮರಳುತ್ತವೆ
ಹೂವು ಹಣ್ಣಾಗಿ ಬೀಜ ಕೊಡುವಂತೆ
ಹೂಹಕ್ಕಿ ಹಾಡಿ ಕೂಡಿ
ಬಿಳಿಹೂವ ಬೆಳೆಯುತ್ತವೆ
ಎಲ್ಲರ ಸೆಳೆಯುತ್ತವೆ.
ಶುಕ್ರವಾರ, ಏಪ್ರಿಲ್ 8, 2011
ಭಾವ - ಬಣ್ಣ
ಬದುಕು ಸಾರ್ಥಕಗೊಳಲು ಬಣ್ಣ ಬೇಕೆ ?
ಬಿಳಿಯ ಬಣ್ಣದ ತೊಗಲು ಒಲವು ಒಣಗಿರುವ ಕೆರೆ
ಭಾವ ಬಾಯಾರಿಕೆಗೆ ಬಣ್ಣ ಸಾಕೆ?
ಬಣ್ಣಗಳು ಬದುಕನ್ನು ಹಸನುಗೊಳಿಸುವುದಿಲ್ಲ
ಪ್ರೀತಿ ನೇಗಿಲು ಉಳಲು ಭಾವ ಬೆಳೆಯು
ಸಹಜತಯು ಮುತ್ತುತಿರೆ ಮಣ್ಣಗುಣ ಮೆತ್ತುತಿರೆ
ಮೂಲ ಸಾರವ ಹೀರಿ ಬರಲು ಕಳೆಯು.
ಬಣ್ಣಗಳು ಮೂಲದಿಂ ಬಂದಿರಲು ಬದಲಿಸಲು
ಸಾಧ್ಯವಾಗದು ಸದ್ಯ, ಭಾವ ಮುಖ್ಯ
ಜೀವನದ ಕುಣಿಕೆಯಲಿ ಭಾವವೆಮ್ಮೆಣಿಕೆಯಲಿ
ಒಲವಿನಲಿ ಬೆಸಗೊಳಲು ಬೇಕು ಸಖ್ಯ.
ಕರಿಯನೋ ಬಿಳಿಯಳೋ ಬಣ್ಣಗಳು ಬೇಕಿಲ್ಲ
ಬಾಳು ಸಿಂಗರಗೊಳಲು ದ್ವೇಷ ನೂಕಿ
ಬಿಳಿಯಳೋ ಕರಿಯನೋ ಭಾವಗಳು ಯಾಕಿಲ್ಲ
ಬಾಳಬೇಕಿರುವ ದಿನ ಮೂರು ಬಾಕಿ.
ಒಲವು ಒಡಲೊಳಗಿರಲು ಮೈಬಣ್ಣವೆಂತಿರಲಿ
ಬಣ್ಣದೋಕುಳಿಯಾಟ ಬದುಕರಂಗ
ನಲವಸವಿ ನವಿಲಗರಿ ಮನದಲ್ಲಿ ಬಿಚ್ಚದಿರೆ
ಬಣ್ಣಬಣ್ಣದ ಕನಸು ಪೂರ್ಣ ಭಂಗ.
ಸೋಮವಾರ, ಏಪ್ರಿಲ್ 4, 2011
ಚೈತ್ರಚುಂಬನ
ಪರಿಮಳದ ಜಾಡಿನಲಿ
ಕೋಗಿಲೆಯ ಹಾಡಿನಲಿ
ಚಿಗುರು ಚುಂಬನ ತುಟಿಯ ತುಂಟಿ ಚೈತ್ರ
ಬಣ್ಣ ಬಣ್ಣದ ಉಡುಪು
ತುಂಬು ಫಲಗಳ ಹಿಡಿಪು
ಭಾವಜೀವಿಗೆ ಮುಡಿಪು
ಮನವ ಸಾವಿರ ಸೆಳೆದ ಚೆಲುವ ಜೈತ್ರ
ಇಡಲು ಚೆನ್ನಡಿ ಕೆಳಗೆ
ಸುರಿವ ಸುಮಗಳ ಮಳೆಗೆ
ಕಣ್ಣು ತುಂಬಲು ಕಳೆಗೆ
ಭುವನಸುಂದರಿ ಬರುವು ಕೊಟ್ಟ ಸುಳಿವು
ಆಗಸದ ಕಡುನೀಲಿ
ಹೂಗೊಂಚಲಿನ ಡೋಲಿ
ಪ್ರಾಯಪ್ರೇಮದ ಕೇಲಿ
ಮುಳುಗಿ ಏಳಲು ನವುರ ಹರಯ ಕೊಳವು
ಮಾವು ಬೇವಿನ ಚಿಗುರು
ಅರೆಗಾಯಿಗಳ ಒಗರು
ಘಮಿಪ ಮರಗಳ ಅಗರು
ಸೂರ್ಯ ರಶ್ಮಿಯು ಇಳೆಗೆ ಸುರಿವ ಝಳವು
ಮಂಗಳವಾರ, ಸೆಪ್ಟೆಂಬರ್ 7, 2010
ಗ್ರಹಣ ವಿಜ್ಞಾನ
ಬಾನಿನಂಗಳದಲ್ಲಿ ಚಣಕಾಲ ನಡೆಯುವುದು
ನೆಳಲು ಬೆಳಕಿನ ಚೆಲುವ ಆಟ
ನಯನಗಳ ಎದುರಿನಲಿ ನಯವಾಗಿ ತೋರುವುದು
ಗಗನ ವೈವಿಧ್ಯದಾ ಸವಿಯ ಊಟ.
ಯಾವುದೋ ವೇಗದಲಿ ಯಾವುದೋ ಜಾಗದಲಿ
ಸಂಧಿಸಲು ಕಾಯಗಳ ದಿನದ ಪಯಣ
ಸೇರುವಾ ದಿನಬರಲು ಸಂತಸದ ಸವಿತರಲಿ
ಗ್ರಹಣ ಗಗನದೆಡೆಗೆ ಹರಿವ ನಯನ.
ಭೂಮಿ ಸೂರ್ಯನ ನಡುವೆ ಚಂದ್ರ ಕುಣಿಯುತ ಬರಲು
ಸೇರುತಲಿ ಕಾಯಗಳು ಸರಳರೇಖೆ
ಚಂದ್ರನಾ ಇಡಿನೆರಳು ಭೋಮಿಯಲಿ ಬಿದ್ದಿರಲು
ಗ್ರಹಣದಧ್ಯಯನಕ್ಕೆ ತೆರೆದಶಾಖೆ.
ಅಡ್ಡನಾಗಲು ಚಂದ್ರ ರವಿಯ ಮರೆಯಾಗಿಸುತ
ಅರ್ಧಭೂಮಿಯ ಮೇಲೆ ಹಗಲುಮಾಯ
ನೆಳಲು ಬೆಳಕಲಿ ನಡೆವ ಚಿತ್ರವೈಚಿತ್ರ್ಯಕೆ
ಚಲನೆ ಕಾರಣ ಮೂಲ ಗಗನಕಾಯ.
ಗ್ರಹಣವಾಗುವ ಮೊದಲು ಬೆಳಕ ದೋಣಿಯನೇರಿ
ಯಾರೊ ಬಂದರು ನೆರಳ ಪರದೆ ಹಿಡಿದು
ಗ್ರಹಣ ಕರಗಲು ಹಿಡಿಯೆ ವಜ್ರದುಂಗುರ ತೋರಿ
ಮುಂದೆ ನಡೆದರು ಬೆಳಕ ಪ್ರೀತಿ ಮಿಡಿದು.
ಬೆಳಕ ಕಾಯಗೆ ಬೇಕು ಗ್ರಹಣವಾಗಲು ತಡೆಯು
ಅದಕೆ ಉಪಗ್ರಹದ ಬಲ ಸನಿಹವಿರಲು
ತಡೆಯು ಇಲ್ಲದೆ ಗ್ರಹಣ ಬರಿದೆ ನಿತ್ಯದ ಭ್ರಮಣ
ಸೊಗಸ ಸಂಪೂರ್ಣತೆಯು ಕೊರಗುತಿರಲು.
ಜಗದ ಕಾಯಕ ನಿತ್ಯ ಗಗನ ಕಾಯದ ಸತ್ಯ
ತಿಳಿಸುವುದು ಈ ತೆರನ ವಿದ್ಯಮಾನ
ಸಿಗಲು ಮಾಹಿತಿ ಇಂಥ ಸರಿಯುವುದು ಕತೆ ದಂತ
ಅಳಿಸುವುದು ಮೌಢ್ಯವನು ನೀಡಿ ಧ್ಯಾನ.
ಮೌಡ್ಯ ನಂಬಲುಬೇಡಿ ಸೂಕ್ಷ್ಮತನದಲಿ ನೋಡಿ
ರವಿಯ ನುಂಗಲು ಬಹನು ಕೇತುವಲ್ಲ
ಮೂಲ ಬೆಳಕಿನ ನಡುವೆ ಮರೆ ಇರಿಸುವಾ ನೆರಳು
ಗ್ರಹಣವಾಗಲು ಕೇತು ಹೇತುವಲ್ಲ.
ಬರಿಯ ಕಣ್ಣಲಿ ರವಿಯ ನೋಡುವುದು ನಿಲ್ಲಿಸಿರಿ
ಪ್ರಖರ ಬೆಳಕಿನ ಕಿರಣ ಸುಡಲು ಸಾಕು
ಪರಿಸರದ ಮೇಲೆಲ್ಲ ಪರಿಣಾಮ ಬೀರಿದರೆ
ಎಂದಿನಂತೆಯೆ ಬಾಳು ನಡೆಸಬೇಕು.
ಗುರುವಾರ, ಜುಲೈ 22, 2010
"ಸ್ಕೂಲಿನ ಅಸೆಂಬ್ಲಿಯಲ್ಲಿ ಓದಲು ಪ್ರಪಂಚದ ಏಳು ಅದ್ಭುತಗಳ ಬಗ್ಗೆ ಒಂದು ಕವನವನ್ನು ಬರೆದುಕೊಡು ಅಪ್ಪಾ" ಎಂಬ ಮಗಳ ಒತ್ತಾಯಕ್ಕೆ ಬರೆದ ಗೀತೆಯಿದು.
ಅದ್ಭುತ ಗೀತೆ
ವಿಶ್ವದಲ್ಲಿನ ಏಳು ಅದ್ಭುತ
ಪದ್ಯ ರೂಪದಿ ಹೇಳುವೆ
ಮನವು ಹರುಷಕೆ ಆಗಿ ಗದ್ಗದ
ನೆನಪನೊಮ್ಮೆಗೆ ಊಳುವೆ
ಗೀಜಾ ಪಿರಮಿಡ್ ಬಹಳ ಹಳೆಯದು
ನಂಬಿಕೆಯಾ ಪ್ರತೀಕವು
ಗ್ರೀಕ ದೇಶದ ಹೆಮ್ಮೆ ರಚನೆಯ
ನೋಡುತಿರೆ ಮನ ಮೂಕವು
ಮಾಚುಪಿಚ್ಚು ಇಂಕ ಜನರ
ಮನದ ಸಂಸ್ಕೃತಿ ತಿಳಿಸಲು
ಪೆರುವ ಜನಗಳ ನಾಗರೀಕತೆ
ಪ್ರಕೃತಿ ಪ್ರೇಮವ ಬೆಳೆಸಲು
ಚೀನ ದೇಶದ ಮಹಾಗೋಡೆಯ
ಒಮ್ಮೆಯಾದರು ನೋಡೆಯ
ಮನುಜ ನಿರ್ಮಿತ ಮಹದ್ರಚನೆಯ
ಹೃದಯ ತುಂಬಿ ಹಾಡೆಯ
ಇಟಲಿ ದೇಶದ ರೋಮ ನಗರದ
ರಂಗ ಮಂದಿರ ಸುಂದರ
ಕೊಲೆಸಿಯಂನ ಸೌಧ ವೈಭವ
ಜ್ಞಾನ ಕಲೆಗಳ ಹಂದರ
ಜೋರ್ಡನ್ ದೇಶದ ಪೆಟ್ರ ಕೆತ್ತನೆ
ನೋಡೆ ಮೈ ನವಿರೇಳಲು
ಮರಳ ಕಲ್ಲಲಿ ಕಲೆಯ ಬಿತ್ತನೆ
ಸಂಸ್ಕೃತಿಯ ಸವಿ ಹೇಳಲು
ಬ್ರೆಜ಼ಿಲ್ ದೇಶದ ಕ್ರಿಸ್ತ ಪ್ರತಿಮೆಯು
ಗಾತ್ರದಲಿ ಇರೆ ತಾರಕ
ಶಾಂತಿ ಮಂತ್ರವ ಪಠಿಸಿ ನಿಂತಿರೆ
ಒಲವ ಜಗದೋದ್ಧಾರಕ
ನಮ್ಮ ದೇಶದ ಹೆಮ್ಮೆ ನೋಡಲು
ಮನವು ತುಂಬುತ ನಲಿವುದು
ತಾಜಮಹಲಿನ ಕೀರ್ತಿಹಾಡಲು
ಷಹಜಹಾನಗೆ ಸಲುವುದು
ಮನುಜಯತ್ನದ ಏಳು ಅದ್ಭುತ
ಹೀಗೆ ಕವನದಿ ಹಾಡಿದೆ
ಕಾಲಧನುಜನ ವಿಕಟ ದಾಳಿಗೆ
ಬಿರುಕು ಕೆಲವೆಡೆ ಮೂಡಿದೆ.
ಬುಧವಾರ, ಜೂನ್ 9, 2010
ಮುಂಗಾರು ಮಳೆ
ಎಡಬಿಡದೆ ಸುರಿಯುತಿದೆ
ಮುಂಗಾರ ಮೊದಲಮಳೆ
ಕುಡಿಯೊಡೆದು ಚಿಗುರುತಿದೆ
ಕಾದು ಕರಟಿರುವ ಗರಿಕೆ ನೆಲ
ಕವಿದ ಕಾರ್ಮೋಡಗಳ ಸೀಳುತಿದೆ
ಗುಡುಗು ಸಿಡಿಲುಗಳ ನಾರಾಚ
ಕಿವಿಗಪ್ಪಳಿಸುತಿದೆ ಬಿಡದೆ
ಭೋರ್ಗರೆವ ಮಳೆಯ ಅಹಿತರಾಗ
ಕವಿದ ಮೇಘಗಳ ಹಂದರಕೆ
ಹಗಲು ಇರುಳಾಗಿದೆ
ಸುರಿವ ಮಳೆಯ ಪ್ರಭಾವಕೆ
ತೊರೆಯುಕ್ಕಿ ಪ್ರವಹಿಸುತ್ತಿದೆ
ಝರಿಯ ಹನಿಯ ನಿಬಿಡತೆಗೆ
ಗೂಡ ಸೇರಿವೆ ಜೀವ ಸಂಕುಲವು
ಹರಿವ ನದಿಯ ಚೆಲುವಿಕೆಗೆ
ನವಿರೇಳುತಿದೆ ಮೈಮನವು
ಉಗಿದೇಳ್ವ ಸಿಡಿಲ ಆರ್ಭಟಕೆ
ಬಿರುಕೊಡೆಯುತಿದೆ ಎದೆಯೊಳು
ಪುಟಿದೇಳ್ವ ಬುಗ್ಗೆಯಂದಕೆ
ಹಗುರಾಗುತಿದೆ ಹೃದಯವು.